Please enable javascript.Actress Surekha Death,ಡಾ. ರಾಜ್ ಜೊತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಸುರೇಖಾ ಇನ್ನಿಲ್ಲ - kannada senior actress surekha passes away due to heart attack - Vijay Karnataka

ಡಾ. ರಾಜ್ ಜೊತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಸುರೇಖಾ ಇನ್ನಿಲ್ಲ

Vijaya Karnataka Web | 6 Jun 2021, 12:41 pm
Subscribe

ಕನ್ನಡ ಚಿತ್ರರಂಗಕ್ಕೆ ಒಂದರ ಮೇಲೊಂದು ಆಘಾತಗಳು ಎದುರಾಗುತ್ತಲೇ ಇವೆ. ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕ ರಾಮು, ಹಿರಿಯ ನಟರಾದ 'ಶಂಖನಾದ' ಅರವಿಂದ್, ಕೃಷ್ಣೇಗೌಡ, ಬಿ. ಜಯಾ ಅವರು ಇಹಲೋಕ ತ್ಯಜಿಸಿದ್ದರು. ಈಗ ಮತ್ತೋರ್ವ ನಟಿ ನಿಧನರಾಗಿದ್ದಾರೆ.

ಹೈಲೈಟ್ಸ್‌:

  • ಕನ್ನಡ ಚಿತ್ರರಂಗಕ್ಕೆ ಎದುರಾಯ್ತು ಮತ್ತೊಂದು ಆಘಾತ
  • ಹೃದಯಾಘಾತದಿಂದ ಸಾವನ್ನಪ್ಪಿದ ಜನಪ್ರಿಯ ಹಿರಿಯ ನಟಿ ಸುರೇಖಾ
  • ಡಾ. ರಾಜ್‌ಕುಮಾರ್ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದೆ
Surekha
ಕೆಲ ದಿನಗಳ ಹಿಂದಷ್ಟೇ ಹಿರಿಯ ನಟಿ ಬಿ. ಜಯಾ ಅವರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತ್ತು. ಇದೀಗ ಮತ್ತೋರ್ವ ಜನಪ್ರಿಯ ಹಿರಿಯ ನಟಿ ಸುರೇಖಾ ಅವರು ನಮ್ಮನ್ನಗಲಿದ್ದಾರೆ. ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡದ ಹಲವು ನಟರ ಜೊತೆಗೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಸುರೇಖಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ನೃತ್ಯ ಕಲಾವಿದೆಯೂ ಆಗಿದ್ದ ಸುರೇಖಾ, ವಿವಾಹವಾಗಿರಲಿಲ್ಲ.

'ಸುರೇಖಾ ಅವರು ನೃತ್ಯ ಕಲಾವಿದೆಯಾಗಿದ್ದರು. ಆಗಾಗ ಅವರಿಗೆ ಮಂಡಿ ನೋವು ಬರುತ್ತಿತ್ತು. ಚೆನ್ನಾಗಿಯೇ ಇದ್ದ ಅವರು ಶನಿವಾರ ರಾತ್ರಿ 9.30ರ ಸುಮಾರಿಗೆ ಟಿವಿ ನೋಡುತ್ತ ಕುಳಿತಿದ್ದರು. ಆಗ ಅವರಿಗೆ ತೀವ್ರ ಹೃದಯಾಘಾತವಾಯಿತು' ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಸುರೇಖಾ ಅವರಿಗೆ ಹೃದಯಾಘಾತವಾದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರು ಎಳೆದಿದ್ದಾರೆ. ಅವರಿಗೆ ಶಾರದಾ ಮತ್ತು ಪ್ರೇಮಾ ಎಂಬ ಇಬ್ಬರು ಸಹೋದರಿಯರು ಇದ್ದಾರೆ. ಇಂದು (ಜೂ.6) ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಸುರೇಖಾ ಅವರ ಅಂತ್ಯಕ್ರಿಯೆಯನ್ನು ಕುಟುಂಬ್ಥರು ನೆರವೇರಿಸಿದ್ದಾರೆ.

ಡಾ. ರಾಜ್ ಕುಮಾರ್ ಅಭಿನಯದ ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಮಾಯಾ ಮನುಷ್ಯ, ನಾನು ಬಾಳಬೇಕು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು, ತಾಯಿ ದೇವರು, ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ನಾಗರ ಹೊಳೆ ಸೇರಿದಂತೆ 150ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜೊತೆಗೆ ತಮಿಳಿನ 'ನಾನು ಅವನಿಲ್ಲೈ' ಚಿತ್ರದಲ್ಲೂ ನಟಿಸಿದ್ದರು ಅವರು. ಕೆ.ಬಾಲಚಂದರ್ ಅದರ ನಿರ್ದೇಶಕರು.
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಬಿ. ಜಯಾ ಇನ್ನಿಲ್ಲ

ಭರತ ನಾಟ್ಯ ಮತ್ತು ಕೂಚುಪುಡಿ ನೃತ್ಯಗಾರ್ತಿ ಆಗಿದ್ದ ಸುರೇಖಾ, ಆ ಮೂಲಕವೇ ಚಿತ್ರರಂಗವನ್ನು ಪ್ರವೇಶಿಸಿದ್ದರು. ಭಾರತದ ಹಲವು ಭಾಗಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಅವರು, ಲಂಡನ್, ಪ್ಯಾರಿಸ್ ಸೇರಿದಂತೆ ಹಲವು ವಿದೇಶಿ ತಾಣಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿದ್ದರು. ಸುರೇಖಾ ಅವರಿಗೆ ಫೆ.13ರಂದು ಎಸ್.ಪಿ. ವರದರಾಜ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

'ಹಾಲುಂಡ ತವರು' ಖ್ಯಾತಿಯ ಹಿರಿಯ ಪೋಷಕ ನಟ ಕೃಷ್ಣೇಗೌಡ ನಿಧನ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ