Please enable javascript.Michael Madhu Death,ಜನಪ್ರಿಯ ಹಾಸ್ಯ ನಟ ಮೈಕೆಲ್ ಮಧು ನಿಧನ! ಕಂಬನಿ ಮಿಡಿದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು - famous kannada comedy actor michael madhu no more - Vijay Karnataka

ಜನಪ್ರಿಯ ಹಾಸ್ಯ ನಟ ಮೈಕೆಲ್ ಮಧು ನಿಧನ! ಕಂಬನಿ ಮಿಡಿದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು

Vijaya Karnataka Web | 14 May 2020, 9:41 am
Subscribe

ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯ ನಟ ಮೈಕೆಲ್‌ ಮಧು ಬುಧವಾರ (ಮೇ 13) ನಿಧನರಾದರು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಗುರುವಾರ ಅಂತ್ಯಕ್ರಿಯೆ ನಡೆಯಲಿದ್ದು, ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಮೈಕೆಲ್ ಮಧು
ನೂರಾರು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಅಭಿನಯಿಸಿದ್ದ ಖ್ಯಾತ ನಟ ಮೈಕೆಲ್ ಮಧು ಬುಧವಾರ ಕೊನೆಯುಸಿರೆಳೆದರು. ಮಧ್ಯಾಹ್ನ ಊಟ ಮಾಡಿದ ನಂತರ ಇದ್ದಕ್ಕಿದ್ದಂತೆ ಅವರು ಕುಸಿದು ಬಿದ್ದರು. ಬಳಿಕ ಅವರನ್ನು ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು.

ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ಅಭಿನಯಿಸುವ ಮೂಲಕ ಮೈಕೆಲ್‌ ಮಧು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. 'ಸೂರ್ಯವಂಶ', 'ಓಂ', 'ಶ್‌', 'ಎ' ಮುಂತಾದ ಸಿನಿಮಾಗಳ ಮೂಲಕ ಅವರು ಮನೆಮಾತಾಗಿದ್ದರು. ಮೈಕೆಲ್‌ ಮಧು ಮೃತ ದೇಹವನ್ನು ಗುರುವಾರ ಕಿಮ್ಸ್‌ ಆಸ್ಪತ್ರೆಯು ಕುಟುಂಬದವರಿಗೆ ಒಪ್ಪಿಸಲಿದ್ದು, ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ನಟ ಆಗುವುದಕ್ಕೂ ಮುನ್ನ ನೃತ್ಯ ನಿರ್ದೇಶಕ ಆಗಬೇಕು ಎಂದು ಮೈಕೆಲ್‌ ಮಧು ಕನಸು ಕಂಡಿದ್ದರು. ಅವರು ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಾರೆ ಎಂಬ ಕಾರಣಕ್ಕೇ ಅವರ ಹೆಸರಿನ ಜೊತೆ 'ಮೈಕೆಲ್‌' ಸೇರಿಕೊಂಡಿತ್ತು. ಆದರೆ ಅವರ ಡ್ಯಾನ್ಸ್ ಉತ್ಸಾಹಕ್ಕೆ ಪ್ರೋತ್ಸಾಹ ಸಿಗದ ಕಾರಣ ನೃತ್ಯ ನಿರ್ದೇಶಕನಾಗುವ ಕನಸಿಗೆ ವಿದಾಯ ಹೇಳಿ ನಟನೆಯತ್ತ ಗಮನ ಹರಿಸಿದರು.

'ಸಿಂಗಾರಿ ಬಂಗಾರಿ' ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದ ಮೈಕೆಲ್‌ ಮಧು, ನಂತರ ಹಲವಾರು ಅವಕಾಶಗಳನ್ನು ಪಡೆದುಕೊಂಡರು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅವರು ಇತ್ತೀಚೆಗೆ ಚಿತ್ರರಂಗದಿಂದ ಕೊಂಚ ದೂರ ಆಗಿದ್ದರು. ಅವಕಾಶಗಳ ಕೊರತೆ ಅವರನ್ನು ಕಾಡಿತ್ತು.

ಮೈಕೆಲ್‌ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. 'ನಾನು ಚಿತ್ರರಂಗಕ್ಕೆ ಬಂದಾಗ ಸಿಕ್ಕ ಒಳ್ಳೆಯ ಗೆಳೆಯರಲ್ಲಿ ಮೈಕೆಲ್‌ ಮಧು ಕೂಡ ಒಬ್ಬರು ಸರಳ ಸ್ವಭಾವ, 24X7 ಉತ್ಸಾಹ. ಎಲ್ಲರನ್ನೂ ಸಮನಾಗಿ ಕಾಣುವ ಮನೋಭಾವ. ಭಾರದ ಮನಸ್ಸಿನಿಂದ ಹೇಳುವೆ ನಿಮಗೆ ಶ್ರದ್ಧಾಂಜಲಿ' ಎಂದು ಟ್ವೀಟ್‌ ಮಾಡಿದ್ದಾರೆ ನಟ ಶರಣ್‌.


ನಟ ನವೀನ್‌ ಕೃಷ್ಣ ಕೂಡ ಸಂತಾಪ ಸೂಚಿಸಿದ್ದಾರೆ. 'ಮೈಕೆಲ್‌ ಮಧು ಸರ್‌ ನನಗೆ ನತ್ಯ ಕಲಿಸಿದ ಗುರುಗಳು. ನಮ್ಮನ್ನು ಅಗಲಿದ್ದಾರೆ. ಹೋಗಿ ಬನ್ನಿ ಗುರುಗಳೇ..' ಎಂದು ನವೀನ್‌ ಕೃಷ್ಣ ಟ್ವೀಟ್‌ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಿರ್ದೇಶಕ ಸುನಿ, ನಿರ್ಮಾಪಕ ಕಾರ್ತಿಕ್‌ ಗೌಡ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ